ಹರಿಕಥಾಮೃತಸಾರ ಗುರುಗಳ |

ಕರುಣದಿಂದಾಪನಿತು ಪೇಳುವೆ |

ಪರಮಭಗವದ್ಭಕ್ತರಿದನಾದರದಿ ಕೇಳುವುದು ||

ಶ್ರೀರಮಣಿಕರಕಮಲಪೂಜಿತ 

ಚಾರುಚರಣಸರೋಜ ಬ್ರಹ್ಮಸ 

ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ |

ನೀರಜಭವಾಂಡೋದಯಸ್ಥಿತಿ 

ಕಾರಣನೆ ಕೈವಲ್ಯದಾಯಕ 

ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವಾ || ೧ ||

ಜಗದುದರನತಿ ವಿಮಲಗುಣರೂ 

ಪಗಳನಾಲೋಚನದಿ ಭಾರತ 

ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ |

ಬಗೆಬಗೆಯ ನೂತನವ ಕಾಣುತ 

ಮಿಗೆ ಹರುಷದಿಂ ಪೊಗಳಿ ಹಿಗ್ಗುವ

ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು || ೨ ||

ನಿರುಪಮಾನಂದಾತ್ಮಭವ ನಿ 

ರ್ಜರಸಭಾಸಂಸೇವ್ಯ ಋಜುಗಣ|

ದರಸೆ ಸತ್ತ್ವ ಪ್ರಚುರ ವಾಣೀಮುಖಸರೋಜೇನ |

ಗರುಡಶೇಷಶಶಾಂಕದಳಶೇ  

ಖರರ ಜನಕ ಜಗದ್ಗುರುವೇ ತ್ವ  

ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ || ೩ ||

ಆರು ಮೂರೆರಡೊಂದು ಸಾವಿರ 

ಮೂರೆರಡು ಶತಶ್ವಾಸ ಜಪಗಳ 

ಮೂರುವಿಧ ಜೀವರೊಳಗಬ್ಜಜಕಲ್ಪಪರಿಯಂತ | 

ತಾ ರಚಿಸಿ ಸಾತ್ತ್ವರಿಗೆ ಸುಖ ಸಂ  

ಸಾರ ಮಿಶ್ರರಿಗಧಮಜನರಿಗ  

ಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ || ೪ ||

ಚತುರವದನನ ರಾಣಿ ಅತಿರೋ  

ಹಿತ ವಿಮಲ ವಿಜ್ಞಾನಿ ನಿಗಮ  

ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ | 

ನತಿಸಿ ಬೇಡುವೆ ಜನನಿ ಲಕ್ಷ್ಮೀ  

ಪತಿಯ ಗುಣಗಳ ತುತಿಪುದಕೆ ಸ 

ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ || ೫ ||

ಕೃತಿರಮಣ ಪ್ರದ್ಯುಮ್ನನಂದನೆ 

ಚತುರವಿಶಂತಿ ತತ್ತ್ವಪತಿ ದೇ 

ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ || 

ಸತತ ಹರಿಯಲಿ ಗುರುಗಳಲಿ ಸ 

ದ್ರತಿಯ ಪಾಲಿಸಿ ಭಾಗವತ ಭಾ 

ರತಪುರಾಣರಹಸ್ಯ ತತ್ತ್ವಗಳರುಪು ಕರುಣದಲಿ || ೬ ||

ವೇದಪೀಠ ವಿರಿಂಛಿ ಭವ ಶ 

ಕ್ರಾದಿ ಸುರ ವಿಜ್ಞಾನದಾಯಕ 

ಮೋದ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ || 

ಛೇದ ಭೇದ ವಿಷಾದ ಕುಟಿಲಾಂ 

ತಾದಿ ಮಧ್ಯ ವಿದೂರ ಆದಾ 

ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ || ೭ ||

ಕ್ಷಿತಿಯೊಳಗೆ ಮಣಿಮಂತ ಮೊದಲಾ  

ದತಿ ದುರಾತ್ಮರು ಒಂದಧಿಕ ವಿಂ 

ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ ||

ಸತಿಯ ಜಠರದೊಳವತರಿಸಿ ಭಾ 

ರತಿ ರಮಣ ಮಧ್ವಾಭಿಧಾನದಿ 

ಚತುರದಶ ಲೋಕದಲಿ ಮೆರೆದಪ್ರತಿಮಗೊಂದಿಸುವೆ || ೮ ||

ಪಂಛ ಭೇದಾತ್ಮಕ ಪ್ರಪಂಛಕೆ  

ಪಂಚರೂಪಾತ್ಮಕನೆ ದೈವಕ  

ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ || 

ಪಂಚವಿಂಶತಿ ತತ್ತ್ವ ತರತಮ 

ಪಂಛಿಕೆಗಳನು ಪೇಳ್ದ ಭಾವಿ ವಿ  

ರಿಂಛಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||

ವಾಮದೇವ ವಿರಿಂಚಿತನಯ ಉ 

ಮಾ ಮನೋಹರ ಉಗ್ರ ಧೂರ್ಜಟಿ 

ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ||

ಕಾಮಹರ ಕೈಲಾಸ ಮಂದಿರ  

ಸೋಮಸೂರ್ಯಾನಲ ವಿಲೋಚನ 

ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ || ೧೦ ||

ಕೃತ್ತಿವಾಸನೆ ಹಿಂದೆ ನೀ ನಾ 

ಲ್ವತ್ತು ಕಲ್ಪ ಸಮೀರನಲಿ ಶಿ 

ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು ||

ಹತ್ತು ಕಲ್ಪದಿ ತಪವಗೈದಾ 

ದಿತ್ಯರೊಳಗುತ್ತಮನೆನಿಸಿ ಪುರು 

ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ || ೧೧ ||

ಪಾಕಶಾಸನ ಮುಖ್ಯ ಸಕಲ ದಿ 

ವೌಕಸರಿಗಭಿನಮಿಪೆ ಋಷಿಗಳಿ 

ಗೇಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ ||

ಆ ಕಮಲನಾಭಾದಿ ಯತಿಗಳ 

ನೀಕಕಾನಮಿಸುವೆನು ಬಿಡದೆ ರ 

ಮಾಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||

ಪರಿಮಳವು ಸುಮನದೊಳಗನಲ

ನರಣಿಯೊಳಗಿಪ್ಪಂತೆ ದಾಮೋ 

ದರನು ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ ||

ಇರುತಿಹ ಜಗನ್ನಾಥ ವಿಠಲನ 

ಕರುಣ ಪಡೆವ ಮುಮುಕ್ಷು ಜೀವರು 

ಪರಮಭಾಗವತರನು ಕೊಂಡಾಡುವುದು ಪ್ರತಿದಿನವು || ೧೩ ||
ವರ್ಗ:ಹರಿಕಥಾಮೃತಸಾರ